ಭಕ್ತಿ, ಜ್ಞಾನ ಮತ್ತು ವಿನಯಗಳ ಸಂಗಮ

Sri Mahavishnu Info

ಭಕ್ತಿ, ಜ್ಞಾನ ಮತ್ತು ವಿನಯಗಳ ಸಂಗಮ
ಸನಾತನ ಧರ್ಮ ಮಸಕಾಗುತ್ತಿದ್ದ ಸಂಧಿಕಾಲದಲ್ಲಿ ತಮಿಳುನಾಡಿನಲ್ಲಿ ಭಕ್ತಿಯ ಆವೇಶವನ್ನು ಹುಟ್ಟಿಸಿ ಶ್ರೀವೈಷ್ಣವ ಮತವನ್ನು ಪ್ರಚಾರ ಮಾಡಿದವರು ಆಳ್ವಾರರು.

ಆಳ್ವಾರರು ಎಂದರೆ ಭಕ್ತಿ ಸಾಗರದಲ್ಲಿ ಮುಳುಗುವವರು ಎಂದರ್ಥ. ಸುಮಾರು ಏಳನೆಯ ಶತಮಾನದಲ್ಲಿ ಕಾಣಿಸಿಕೊಂಡ ಪೊಯ್‌ಗೈ ಆಳ್ವಾರರು, ಭೂತತ್ತಾಳ್ವಾರರು ಮತ್ತು ಪೇಯ್ ಆಳ್ವಾರರು ಮೊದಲ ಆಳ್ವಾರರೆಂದೇ ಪ್ರಸಿದ್ಧರು.

ಪೊಯ್‌ಗೈ ಆಳ್ವಾರರು ಶ್ರೀವಿಷ್ಣುವಿನ ಪಾಂಚಜನ್ಯ ಶಂಖದ ಅಂಶದವರು, ಭೂತತ್ತಾಳ್ವರರು ವಿಷ್ಣುವಿನ ಕೌಮೋದಕೀ ಗದೆಯ ಅಂಶದಿಂದ ಬಂದವರು ಹಾಗೂ ಪೇಯ್ ಆಳ್ವಾರರು ವಿಷ್ಣುವಿನ ಖಡ್ಗವಾದ ನಂದಕಿಯ ಅಂಶದಿಂದ ಬಂದವರು ಎಂಬ ನಂಬಿಕೆ. ಮೂವರೂ ಆಳ್ವಾರರು ಭಗವಂತನ ಹಿರಿಮೆಯ ಬಗ್ಗೆ ಸುಂದರವಾದ ಕೀರ್ತನೆಗಳನ್ನು ಬರೆದು ಹಾಡಿ ಊರಿಂದ ಊರಿಗೆ ಸಂಚರಿಸಿ ಭಕ್ತಿ ಪ್ರಸಾರ ಮಾಡುತ್ತಿದ್ದರು.

ಮೂವರೂ ಒಂದೇ ಸಮಯದಲ್ಲಿ ಬದುಕಿದ್ದರೂ ಒಬ್ಬರನ್ನೊಬ್ಬರು ಭೆಟ್ಟಿಯಾಗಿರಲಿಲ್ಲ, ಒಬ್ಬರಿಗೆ ಇನ್ನೊಬ್ಬರ ಪರಿಚಯವೂ ಇರಲಿಲ್ಲ. ಒಂದು ಬಾರಿ ಭಗವಂತನಿಗೂ ಈ ಮೂವರೂ ಭಕ್ತ ಶಿರೋಮಣಿಗಳಿಂದ ಏಕಕಾಲಕ್ಕೆ ತನ್ನ ಗುಣಗಾನ ಮಾಡಿಸಿಕೊಳ್ಳಬೇಕು ಎನ್ನಿಸಿತೋ ಏನೋ. ಮೂವರೂ ಆಳ್ವಾರರು ಒಂದೇ ದಿನ ಬೇರೆ ಬೇರೆ ಸಮಯದಲ್ಲಿ ತಿರುಕ್ಕೋವಿಲೂರಿಗೆ ಬರುತ್ತಾರೆ.

ಅಂದು ಭಾರಿ ಮಳೆ. ಮೊದಲು ಬಂದ ಪೊಯ್‌ಗೈ ಆಳ್ವಾರರು ಮಳೆಯಿಂದ ಪಾರಾಗಲು ದೇವಸ್ಥಾನದ ಹತ್ತಿರವೇ ಇದ್ದ ಮನೆಯ ಜಗುಲಿಯ ಮೇಲೆ ಬಂದು ಕೂಡ್ರುತ್ತಾರೆ. ನಂತರ ಆಯಾಸದಿಂದ ಅಲ್ಲಿಯೇ ಮಲಗಿಕೊಳ್ಳುತ್ತಾರೆ. ಆಗ ಅಲ್ಲಿಗೆ ಭೂತತ್ತಾಳ್ವಾರರು ಆಶ್ರಯಕ್ಕೆ ಬಂದು ಮಲಗಿದ್ದ ಪೊಯ್‌ಗೈ ಆಳ್ವಾರರನ್ನು ಎಬ್ಬಿಸಿ ತಮಗೂ ಸ್ವಲ್ಪ ಅವಕಾಶ ದೊರೆತೀತೇ ಎಂದು ಕೇಳುತ್ತಾರೆ.

ತಕ್ಷಣವೇ ಪೊಯ್‌ಗೈಯವರು ಎದ್ದು ಕುಳಿತು ಒಬ್ಬರು ಮಲಗುವ ಜಾಗದಲ್ಲಿ ಇಬ್ಬರು ಕುಳಿತುಕೊಳ್ಳಬಹುದು ಎಂದು ತಾವೂ ಎದ್ದು ಭೂತತ್ತಾಳ್ವಾರರನ್ನು ಕೂಡ್ರಿಸಿಕೊಳ್ಳುತ್ತಾರೆ. ಪರಸ್ಪರ ಪರಿಚಯಿಸಿಕೊಂಡು ಸಂತೋಷಪಡುತ್ತಾರೆ. ಇಬ್ಬರೂ ಸೇರಿ ಭಗವಂತನ ಗುಣಗಾನ ಮಾಡತೊಡಗುತ್ತಾರೆ.

ಮಳೆ ನಿಲ್ಲುವುದಿಲ್ಲ, ಇನ್ನೂ ಧಾರಾಕಾರವಾಗಿಯೇ ಸುರಿಯುತ್ತಿದೆ. ಆ ಹೊತ್ತಿಗೆ ಪೇಯ್ ಆಳ್ವಾರರೂ ಅದೇ ಸ್ಥಳಕ್ಕೆ ಬಂದು ಇಬ್ಬರನ್ನು ನೋಡಿ ತನಗೂ ಸ್ವಲ್ಪ ಸ್ಥಳ ದೊರೆತೀತೇ ಎಂದು ಕೇಳುತ್ತಾರೆ. ಆಗ ಮೊದಲಿಗೆ ಜೊತೆಯಾಗಿದ್ದ ಇಬ್ಬರೂ ಏಕಕಾಲದಲ್ಲಿ `ಇಬ್ಬರು ಕುಳಿತುಕೊಳ್ಳಬಹುದಾದ ಜಾಗದಲ್ಲಿ ಮೂವರು ನಿಲ್ಲಬಹುದು` ಎಂದು ನಿಂತುಕೊಳ್ಳುತ್ತಾರೆ.

ಪೇಯ್ ಆಳ್ವಾರರೂ ಅವರೊಂದಿಗೇ ನಿಂತುಕೊಂಡು ದೇವರ ಗುಣಗಾನ ಮಾಡತೊಡಗಿದರು. ಆಗ ಯಾರೋ ಅವರನ್ನೆಲ್ಲ ಒತ್ತಿ ಹಿಡಿದಂತಾಯಿತು. ನಂತರ ಅತ್ಯಂತ ಪ್ರಕಾಶಮಾನವಾದ ಬೆಳಕು ಹೊಳೆದು ಅಲ್ಲಿ ಶಂಖ, ಚಕ್ರ, ಗದಾ, ಪದ್ಮಗಳಿಂದ ಅಲಂಕೃತನಾದ ಮಹಾವಿಷ್ಣು ಅವತರಿಸಿ ಅವರಿಗೆ ಆಶೀರ್ವದಿಸಿದನಂತೆ.

ಆನಂತರ ಮೂವರೂ ಆಳ್ವಾರರು ಜೊತೆಯಾಗಿಯೇ ದೇಶದಾದ್ಯಂತ ದೇವಾಲಯಗಳನ್ನು ಸಂದರ್ಶಿಸುತ್ತ ಭಕ್ತಿಯ ಪೂರವನ್ನೇ ಹರಿಸಿದರು. ತಿರುಪತಿಗೆ ಬಂದಾಗ ಅವರಿಗೆ ಇಡೀ ಪರ್ವತವೇ ಭಗವಂತನ ದೇವಾಲಯದಂತೆ ಕಂಡುಬಂದಿತು. ಇಂಥ ಪವಿತ್ರವಾದ ಬೆಟ್ಟವನ್ನು ಕಾಲಿನಿಂದ ತುಳಿಯುವುದು ಸರಿಯಲ್ಲ ಎಂದು ಹಿಂದಿರುಗಿದಾಗ ಸಾಕ್ಷಾತ್ ವೆಂಕಟೇಶ್ವರನೇ ಕೆಳಗಿಳಿದು ಬಂದು ದರ್ಶನಕೊಟ್ಟನಂತೆ. ಆ ಸ್ಥಳವನ್ನೂ ಇಂದಿಗೂ ಆಳ್ವಾರ್ ತೀರ್ಥವೆಂದೇ ಕರೆಯುತ್ತಾರೆ.

ಮೂವರೂ ಆಳ್ವಾರರು ಭಕ್ತಿಯ ಸಾಗರದಲ್ಲಿ ಮಿಂದವರು, ಜ್ಞಾನದ ತವನಿಧಿಯಾಗಿದ್ದವರು. ಅದಲ್ಲದೇ ವಿನಯವನ್ನು ಸದಾಕಾಲ ನಡೆದು ತೋರಿದವರು. ಎಲ್ಲಿ ಭಕ್ತಿ, ಜ್ಞಾನ ಮತ್ತು ವಿನಯದ ಸಂಗಮವಿದೆಯೋ ಅದೇ ಭಗವಂತನ ಆವಾಸ ಸ್ಥಾನ ಎಂಬುದು ಈ ಮೂವರು ಆಳ್ವಾರರ ಜೀವನದ ಸಂದೇಶ ನಮಗೆ.

Tags
💜

ಭಕ್ತರ ಮನಮುಟ್ಟುವ ಅನುಭವಗಳು

```

ಈ ತಾಣವನ್ನು ಓದಿದ ನಂತರ ನನ್ನ ಮನಸ್ಸಿಗೆ ಶಾಂತಿ ಮತ್ತು ಭರವಸೆ ದೊರೆಯಿತು.

🌸 ರಮೇಶ್, ಬೆಂಗಳೂರು

ಇಲ್ಲಿರುವ ಆಧ್ಯಾತ್ಮಿಕ ವಿವರಣೆಗಳು ಸ್ಪಷ್ಟವಾಗಿಯೂ ಸರಳವಾಗಿಯೂ ಇವೆ.

🌼 ಸಿಂಧು, ಮೈಸೂರು

ಈ ತಾಣವು ನಮ್ಮ ಮನೆಯಲ್ಲಿ ಒಂದು ಪವಿತ್ರ ಸ್ಥಳದಂತೆಯೇ ಆಗಿದೆ.

🌺 ಕೃಷ್ಣ, ಮಂಗಳೂರು

ನನ್ನ ಆಧ್ಯಾತ್ಮಿಕ ಪ್ರಯಾಣದಲ್ಲಿ ಈ ತಾಣವು ಉತ್ತಮ ಮಾರ್ಗದರ್ಶಿಯಾಗಿದೆ. ಧನ್ಯವಾದಗಳು!

🌹 ಸುಗಂಧಿ, ಹುಬ್ಬಳ್ಳಿ

ನಾನು ಹುಡುಕುತ್ತಿದ್ದ ಅನೇಕ ಮಾಹಿತಿಗಳನ್ನು ಇಲ್ಲಿ ಒಂದೇ ಸ್ಥಳದಲ್ಲಿ ಸುಂದರವಾಗಿ ಪಡೆದುಕೊಂಡೆ.

💠 ಲಲಿತಾ, ಬೆಳಗಾವಿ

ಈ ತಾಣವು ಪ್ರತಿದಿನ ನನ್ನ ಮನಸ್ಸಿನಲ್ಲಿ ಒಂದು ಒಳ್ಳೆಯ ಆಲೋಚನೆಯನ್ನು ಮೂಡಿಸುತ್ತದೆ.

🌿 ಅರುಣ್, ಶಿವಮೊಗ್ಗ

ಇಲ್ಲಿರುವ ವ್ರತ ವಿಧಾನಗಳು ಮತ್ತು ಪೂಜಾ ಮಾಹಿತಿಗಳು ಜೀವನಕ್ಕೆ ತುಂಬಾ ಉಪಯುಕ್ತವಾಗಿವೆ.

🌻 ಮೀನಾಕ್ಷಿ, ತುಮಕೂರು

ದೈನಂದಿನ ರಾಶಿಫಲ ಮತ್ತು ಆಧ್ಯಾತ್ಮಿಕ ಸುದ್ದಿಗಳು ನನ್ನ ದಿನವನ್ನು ಶುಭವಾಗಿ ಆರಂಭಿಸಲು ಸಹಾಯ ಮಾಡುತ್ತವೆ.

☸️ ಕಾರ್ತಿಕ್, ಮೈಸೂರು

ಶ್ಲೋಕಗಳ ಅರ್ಥಗಳನ್ನು ಇಷ್ಟು ಸರಳವಾಗಿ ನಾನು ಇದುವರೆಗೆ ಓದಿರಲಿಲ್ಲ!

🪔 ಗಾಯತ್ರಿ, ದಾವಣಗೆರೆ

ಮಾನಸಿಕ ಒತ್ತಡದಲ್ಲಿದ್ದ ನನಗೆ ಇಲ್ಲಿರುವ ಲೇಖನಗಳು ತುಂಬಾ ಸಾಂತ್ವನ ನೀಡಿದವು.

🪷 ಸುಂದರ್, ಮಡಿಕೇರಿ

ದೇವಾಲಯಗಳ ಸ್ಥಳ ಪುರಾಣಗಳ ಕುರಿತ ಮಾಹಿತಿಗಳು ತುಂಬಾ ಅದ್ಭುತವಾಗಿವೆ. ಕುಟುಂಬದೊಂದಿಗೆ ಓದುತ್ತೇವೆ.

🔔 ಪದ್ಮನಾಭ, ಉಡುಪಿ

ಪ್ರತಿಯೊಂದು ಹಬ್ಬದ ಹಿಂದಿರುವ ನಿಜವಾದ ಕಾರಣಗಳನ್ನು ಇಲ್ಲಿಂದ ತಿಳಿದುಕೊಂಡೆ.

🌾 ರೇವತಿ, ಮೈಸೂರು
```