ಕಾವೇರಿ ನದಿ ದಂಡೆಯ ಮೇಲಿರುವ ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿ, ದೇವಸ್ಥಾನಕ್ಕೆ ಚಾರಿತ್ರಿಕ ಮಹತ್ವವಿದೆ. ಈ ದೇವಸ್ಥಾನ ಗಂಗರ ಕಾಲದಲ್ಲಿ ನಿರ್ಮಾಣವಾಯಿತು.

ಈ ಕ್ಷೇತ್ರದಲ್ಲಿ ಪುರಾಣ ಕಾಲದಲ್ಲಿ ಗೌತಮ ಮಹರ್ಷಿಗಳು ತಪಸ್ಸು ಮಾಡಿದ್ದರು ಅದಕ್ಕೆ ಮೆಚ್ಚಿದ ಶ್ರೀ ವಿಷ್ಣು ಇಲ್ಲಿ ಶ್ರೀರಂಗನಾಥ ಹೆಸರಿನಲ್ಲಿ ನೆಲೆಸಿದ್ದಾನೆ ಎಂದು ಪುರಾಣದಲ್ಲಿ ಉಲ್ಲೇಖವಾಗಿದೆ. ಗಂಗರ ದೊರೆ ತಿರುಮಲಯ್ಯನವರ ಕಾಲದಲ್ಲಿ (ಕ್ರಿ.ಶ.894 ರಲ್ಲಿ) ,ಮೂಲ ದೇವಸ್ಥಾನ ನಿರ್ಮಾಣವಾಯಿತು. ವಿಜಯನಗರಅರಸರ ಕಾಲದಲ್ಲಿ ನವರಂಗ, ಮುಖಮಂಟಪ ಹಾಗೂ ರಾಜ ಗೋಪುರಗಳು ನಿರ್ಮಾಣಗೊಂಡವು. ಹೊಯ್ಸಳರ ಮುಮ್ಮುಡಿ ಬಲ್ಲಾಳನ ಕಾಲದಲ್ಲಿ ಒಳಾವರಣದ ಕುಸುರಿ ಕೆತ್ತನೆಗಳುಳ್ಳ ಕಂಬಗಳ ಹಜಾರ ನಿರ್ಮಾಣವಾಯಿತು.ಪಾತಾಳಾಂಕಣದ ಮುಂದಿನ ಭಾಗವನ್ನು ಜನಾಬ್ ಹೈದರ್ ಅಲಿ ಮತ್ತು ಮಂಟಪಗಳನ್ನು ಮೈಸೂರು ಒಡೆಯರ್ ವಂಶ್ಥರು ನಿರ್ಮಿಸಿದರು ಎಂದು ಇತಿಹಾಸ ಹೇಳುತ್ತದೆ.

ಗರ್ಭಗುಡಿಯ ಸುತ್ತ ವಿಷ್ಣುವಿನ ದಶಾವತಾರ ವಿಗ್ರಹಗಳು, ರಾಮಾನುಜಾಚಾರ್ಯರು, ವೇದಾಂತ ದೇಶಿಕರು, ಜೀಯರ್ ಮತ್ತು ಆಳ್ವಾರ್ ಗಳ ಗುಡಿಗಳಿವೆ. ತಲೆಗೆ ಕೈಕೊಟ್ಟು ಪವಡಿಸಿರುವ ಶ್ರೀರಂಗನ ಪದತಲದಲ್ಲಿ ಕಾವೇರಿ ಮಾತೆ ಹಾಗೂ ಎಡ ಬದಿಯಲ್ಲಿ “ಶ್ರೀರಂಗನಾಯಕಿ” ಅಮ್ಮನ ಗುಡಿ ಇದೆ. ಹೊರ ಪ್ರಾಕಾರದಲ್ಲಿ ಪ್ರಸನ್ನ ವೆಂಕಟರಮಸ್ವಾಮಿ ಹಾಗೂ ಹನುಮಂತನ ಗುಡಿಗಳಿವೆ. ಪ್ರತಿವರ್ಷಮಾಘ ಮಾಸದ ಸಪ್ತಮಿಯಂದು ಶ್ರೀರಂಗನಾಥ ಸ್ವಾಮಿಯ ದೊಡ್ಡ ರಥೋತ್ಸವ ಜರುಗುತ್ತದೆ. ಬ್ರಹ್ಮೋತ್ಸವದ ಅಂಗವಾಗಿ ಪ್ರಹ್ಲಾದೋತ್ಸವ, ಗಜೇಂದ್ರಮೋಕ್ಷ, ಸೂರ್ಯ ಮಂಡಲ ವಾಹನೋತ್ಸವ, ಮಂಟಪೋತ್ಸವ, ಹಾಗೂ ಶ್ರೀರಂಗನಾಥ ಮತ್ತು ಅಮ್ಮನವರ ರಥಾರೋಹಣ ಉತ್ಸವಗಳು ಜರುಗುತ್ತದೆ.

ಶ್ರೀರಂಗಪಟ್ಟಣದ ಶ್ರೀರಂಗನಾಥ ದೇವಸ್ಥಾನದಲ್ಲಿ ಉತ್ತರಾಯಣ ಪುಣ್ಯಕಾಲದಅಂಗವಾಗಿ ಸಂಕ್ರಾಂತಿಯ ದಿನದಂದು ವೈಕುಂಠ ದ್ವಾರವನ್ನು ತೆರೆಯಲಾಗುತ್ತದೆ. ಅಂದು ಸಂಜೆ ಲಕ್ಷದೀಪೋತ್ಸವ ನಡೆಯುತ್ತದೆ. ಮೂರನೇ ದಿನ ಶ್ರೀರಂಗನಾಥನ ಚಿಕ್ಕ ರಥೋತ್ಸವ ನಡೆಯುತ್ತದೆ. ವೈಶಾಖ ಶುದ್ದ ಸಪ್ತಮಿಯಂದು “ಶ್ರೀರಂಗ ಜಯಂತಿ” ಉತ್ಸವ ನಡೆಯುತ್ತದೆ.ಅಂದು ರಾತ್ರಿ ರಂಗನಾಥ ಸ್ವಾಮಿಗೆ ವಜ್ರ ಖಚಿತ “ಶ್ರೀ ರಂಗ ಮುಡಿ” ಕಿರೀಟವನ್ನು ತೊಡಿಸಿ ಪೂಜಿಸಲಾಗುತ್ತದೆ. ವರ್ಷದ ಉದ್ದಕ್ಕೂ ದೇವಸ್ಥಾನಲ್ಲಿ ನಿತ್ಯ ಪೂಜೆ, ಅಭೀಷೇಕಳು ನಡೆಯುತ್ತವೆ. ಶ್ರಾವಣ , ಕಾರ್ತೀಕ ಮಾಸದಲ್ಲಿ ವಿಶೇಷ ಪೂಜೆ ,ಉತ್ಸವಗಳು ನಡೆಯುತ್ತದೆ. ಶ್ರೀ ರಂಗ ಪಟ್ಟಣ ಐತಿಹಾಸಿಕ ಸ್ಥಳ, ಇಲ್ಲಿಗೆ ಬರುವ ಪ್ರವಾಸಿಗರು ಶ್ರೀರಂಗನಾಥನ ದೇವಸ್ಥಾನಕ್ಕೆ, ಬಂದು ಪೂಜೆ ಸಲ್ಲಿಸುತ್ತಾರೆ.

ದೇವಸ್ಥಾನ ಪ್ರತಿ ದಿನ ಬೆಳಗಿನ ಐದು ಗಂಟೆಗೆ ತೆರೆಯುತ್ತದೆ. ಸುಪ್ರಭಾತ ಸೇವೆಯ ನಂತರ ಬೆಳಿಗ್ಗೆ 07-30 ರಿಂದ ಮಧ್ಯಾಹ್ನ 01-30 ರವರೆಗೆ ಹಾಗೂ ಸಂಜೆ 04-00 ರಿಂದ ರಾತ್ರಿ 8-00 ರವರೆಗೆ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅವಕಾಶವಿರುತ್ತದೆ. ಶ್ರೀರಂಗಪಟ್ಟಣ ಮಂಡ್ಯದಿಂದ 28 ಕಿ.ಮೀ ಮೈಸೂರಿನಿಂದ 16 ಕಿ.ಮೀ ಹಾಗೂ ಬೆಂಗಳೂರಿನಿಂದ 125 ಕಿ.ಮೀ ದೂರದಲ್ಲಿದೆ. ಸಾರಿಗೆ ಸಂಸ್ಥೆ ಬಸ್ ಹಾಗೂ ರೈಲು ವ್ಯವಸ್ಥೆ ಇದೆ. ಅರ್ಚನೆ, ಅಭೀಷೇಕ ಮಾಡಿಸುವವರು, ಮುಂಚಿತವಾಗಿ ದೇವಸ್ಥಾನದ ಕಾರ್ಯನಿರ್ವಾಹಕಅಧಿಕಾರಿಯನ್ನು ಸಂಪರ್ಕಿಸಬಹುದು. ದೇವಸ್ಥಾನದ ಪೊನ್ ನಂಬರ್,ಇಂತಿದೆ:-08236252273.