ವಿಷ್ಣು ಮಂತ್ರದಲ್ಲಿನ ಮಹತ್ವ

ಅದೃಷ್ಟ, ಸಮಾಧಾನ ಮತ್ತು ಶಾಂತಿ ನೆಲೆಗೊಳ್ಳಲು ಮಹಾವಿಷ್ಣುವನ್ನು ಪೂಜಿಸಬೇಕು ಎಂಬುದಿದೆ. ಹಿಂದೂ ಧರ್ಮದಲ್ಲಿ ಮಹಾವಿಷ್ಣುವು ತ್ರಿಮೂರ್ತಿಗಳಲ್ಲಿ ಒಬ್ಬರಾಗಿದ್ದು ಸೃಷ್ಟಿಯ ಸಂರಕ್ಷಕ ಎಂಬ ಹೆಸರು ವಿಷ್ಣುವಿಗಿದೆ. ವಿಷ್ಣುವಿಗೆ ಸಂಬಂಧಿಸಿದಂತೆ ಹಲವಾರು ಕಥೆಗಳು, ಸ್ತೋತ್ರಗಳು, ಮಂತ್ರಗಳು, ವಿಷ್ನುವಿಗಾಗಿ ಪ್ರತ್ಯೇಕ ಹಬ್ಬಗಳು ಕೂಡ ಇದೆ. ವಿಷ್ಣು ಅವತರಿಸಿದ 10 ವಿವಿಧ ಅವತಾರಗಳಿಂದ ಆತನನ್ನು ನೀತಿಕಥೆಗಳಲ್ಲಿ ನಾರಾಯಣ ಎಂದು ಕರೆಯಲಾಗುತ್ತದೆ. ಯಾವುದೇ ಓರ್ವ ವ್ಯಕ್ತಿಯು ವಿಷ್ಣು ಮಂತ್ರವನ್ನು ಜಪಿಸುವುದರಿಂದ ಆತನಿಗೆ ಸುಖ, ಶಾಂತಿ, ಸಮೃದ್ಧಿ, ಆರೋಗ್ಯ ಪ್ರಾಪ್ತವಾಗುತ್ತದೆ.

ಯಾರು ಬೇಕಾದರು ಜಪಿಸಬಹುದಾದ ಸರಳ ವಿಷ್ಣು ಮಂತ್ರಗಳಿವು:

ಮುಕ್ತಿ ಮಂತ್ರ:

"ಓಂ ಭಗವತೇ ವಾಸುದೇವಾಯ ನಮಃ"

ಪ್ರಯೋಜನ:

ಈ ಮಂತ್ರವನ್ನು ಜಪಿಸುವುದರಿಂದ ನಮ್ಮಲ್ಲಿನ ಸಹಾನುಭೂತಿಯು ವೃದ್ಧಿಯಾಗುತ್ತದೆ. ಪ್ರತಿಯೊಂದು ಜೀವಿಗಳಲ್ಲಿಯೂ ದೈವಿಕ ಅಸ್ಥಿತ್ವವನ್ನು ನೆನಪಿಸಿಕೊಳ್ಳಲು ಇದು ಸಹಕಾರಿ. ಈ ಮಂತ್ರದಿಂದ ಒಬ್ಬರ ಜೀವನದ ಅಡೆತಡೆಗಳು ದೂರಾಗುತ್ತದೆ.
ವಿಷ್ಣು ಶಾಂತಾಕಾರಂ ಮಂತ್ರ:

"ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ

ವಿಶ್ವಧಾರಂ ಗಗನಸದೃಶಂ, ಮೇಘವರ್ಣಂ ಶುಭಾಂಗಮ್

ಲಕ್ಷ್ಮಿಂಕಾತಂ ಕಮಲಾನಯನಂ, ಯೋಗಿಭಿರ್ಧ್ಯಾನಗಮ್ಯಂ

ವಂದೇ ವಿಷ್ಣುಂ ಭವಭಯಹರಂ, ಸರ್ವಲೋಕೈಕನಾಥಂ"


ಪ್ರಯೋಜನ:

ಈ ಮಂತ್ರವನ್ನು ನಿಯಮಿತವಾಗಿ ಜಪಿಸುವುದರಿಂದ ಆ ವ್ಯಕ್ತಿಯಲ್ಲಿನ ಭಯವು ನಾಶವಾಗುತ್ತದೆ. ಆ ವ್ಯಕ್ತಿಯು ನಿರ್ಭಯನಾಗುತ್ತಾನೆ. ಈ ಮಂತ್ರದ ಪಠಣೆಯು ಅವಾಸ್ತವ ಲೌಕಿಕ ಸಂಬಂಧದಿಂದ ಅಥವಾ ವ್ಯವಹಾರಗಳಿಂದ ಮತ್ತು ಅದರ ಭಯದಿಂದ ಹೊರಬರಲು ಸಹಕರಿಸುತ್ತದೆ.

ಶ್ರೀ ವಿಷ್ಣು ಮಂತ್ರ:

"ತ್ವಮೇವ ಮಾತಾ ಚ ಪಿತಾ ತ್ವಮೇವ

ತ್ವಮೇವ ಬಂಧುಶ್ಚ ಸಖಾ ತ್ವಮೇವ

ತ್ವಮೇವ ವಿದ್ಯಾ ದ್ರವಿಣಂ ತ್ವಮೇವ

ತ್ವಮೇವ ಸರ್ವಂ ಮಮ ದೇವದೇವ"


ಪ್ರಯೋಜನ:

ಯಾವುದೇ ಓರ್ವ ವ್ಯಕ್ತಿ ಸಮಸ್ಯೆಯಲ್ಲಿದ್ದಾಗ ಅಥವಾ ಗುರು – ಹಿರಿಯರ, ತಂದೆ – ತಾಯಿಗಳ ಮಾರ್ಗದರ್ಶನದ ಅವಶ್ಯಕತೆಯಿದ್ದಲ್ಲಿ ಈ ಮಂತ್ರವನ್ನು ಪಠಿಸಬೇಕು. ಶ್ರೀ ವಿಷ್ಣು ಮಂತ್ರವನ್ನು ಪಠಿಸುವುದರಿಂದ ಒಬ್ಬ ವ್ಯಕ್ತಿಯು ಹೆಚ್ಚಿನ ಏಕಾಗ್ರತೆಯನ್ನು ಗಳಿಸುತ್ತಾನೆ ಮತ್ತು ವಿಷ್ಣು ಆತನ ಜೀವನದ ಪ್ರತಿಯೊಂದು ಕಷ್ಟದ ಹಾದಿಯಲ್ಲೂ ಮಾರ್ಗದರ್ಶನ ನೀಡುತ್ತಾರೆಂದು ಋಷಿಮುನಿಗಳು ನಂಬಿದ್ದರು.

ವಿಷ್ಣು ಮೂಲ ಮಂತ್ರ:

"ಓಂ ನಮೋ ನಾರಾಯಣಾಯ"

ಪ್ರಯೋಜನ:

ಈ ಮಂತ್ರವನ್ನು ಪಠಿಸಿದ ವ್ಯಕ್ತಿಯ ಮರಣದ ನಂತರ ಆತನನ್ನು ವಿಷ್ಣು ತನ್ನ ವಾಸಸ್ಥಾನವಾದ ವೈಕುಂಠಕ್ಕೆ ಕರೆದುಕೊಂಡು ಹೋಗುತ್ತಾನೆನ್ನುವ ನಂಬಿಕೆಯಿದೆ. ವೈಕುಂಠ ಪ್ರಾಪ್ತಿಗಾಗಿ ಪ್ರಾಚೀನ ಕಾಲದಿಂದಲು ಜನರು ಈ ಮಂತ್ರವನ್ನು ಪಠಿಸಿಕೊಂಡು ಬಂದಿದ್ದಾರೆ.

ವಿಷ್ಣು ಶ್ಲೋಕ:

ಕಾಯೇನ ವಾಚಾ ಮನಸೇಂದ್ರಿಯೈರ್ವಾ

ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್

ಕರೋಮಿ ಯದ್ಯತ್ಸಕಲಂ ಪರಸ್ಮೈ

ನಾರಾಯಣಾಯೇತಿ ಸಮರ್ಪಯಾಮಿ


ಪ್ರಯೋಜನ:

ವಿಷ್ಣುವಿಗೆ ಸಂಬಂಧಿಸಿದ ಈ ಶ್ಲೋಕವು ಭಗವದ್ಗೀತೆ ಮತ್ತು ಮುಕುಂದಮಾಲಾದಲ್ಲಿ ಕಂಡುಬರುತ್ತದೆ. ಈ ಶ್ಲೋಕವನ್ನು ಪಠಿಸುವುದರಿಂದ ಭಗವಾನ್ ವಿಷ್ಣು ವ್ಯಕ್ತಿಯು ಅರಿವಿಲ್ಲದೇ ಮಾಡಿದ ಪಾಪಗಳಿಂದ, ಕರ್ಮಗಳಿಂದ ವಿಮೋಚನೆಗೊಳಿಸುತ್ತಾನೆ. ಈ ಶ್ಲೋಕದ ನಿಯಮಿತ ಪಠಣೆಯಿಂದ ವ್ಯಕ್ತಿಯ ಮಾನಸಿಕ ಒತ್ತಡವು ಕಡಿಮೆಯಾಗುತ್ತದೆ.

ವಿಷ್ಣು ಮಂಗಳಂ ಮಂತ್ರ:

"ಮಂಗಳಂ ಭಗವಾನ್ ವಿಷ್ಣು, ಮಂಗಳಂ ಗರುಡಾಧ್ವಜಾ

ಮಂಗಳಂ ಪುಂಡರೀಕಾಕ್ಷಾ, ಮಂಗಳಂ ತನ್ನೋಂ ಹರಿಹೀ"

ಪ್ರಯೋಜನ:

ಗಣೇಶನನ್ನು ಹೊಸ ಕೆಲಸದ ಆರಂಭದಲ್ಲಿ ಹೇಗೆ ಆತನ ಮಂತ್ರಗಳಿಂದ ಪೂಜಿಸಲಾಗುತ್ತದೆಯೋ, ಹಾಗೇ ಪೂಜೆ, ಮದುವೆ, ಆರತಿ ಮುಂತಾದ ಶುಭ ಸಂದರ್ಭಗಳಲ್ಲಿ ವಿಷ್ಣುವಿನ ಈ ಮಂತ್ರವನ್ನು ಪಠಿಸಲಾಗುತ್ತದೆ. ಶುಭ ಕಾರ್ಯದಲ್ಲಿ ಶುಭ ಪಲವನ್ನು ಪಡೆಯಲು ಈ ಮಂತ್ರವನ್ನು ಪಠಿಸಲಾಗುತ್ತದೆ.

ವಿಷ್ಣು ಪುರಾಣ ಮಂತ್ರ:

"ಓಂ ಅಪವಿತ್ರ: ಪವಿತ್ರೋ ವಾ ಸರ್ವಾವಸ್ಥಾಂ ಗತೋಪಿ ವಾ

ಯ: ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರ: ಶುಚಿ:"

ಪ್ರಯೋಜನ:

ವಿಷ್ಣುವಿನ ಈ ಮಂತ್ರವನ್ನು ಹಲವಾರು ಪುರಾಣಗಳಲ್ಲಿ ನಾವು ನೋಡಬಹುದಾಗಿದ್ದು, ಇದು ವಿಷ್ಣುವಿನ ಪ್ರಮುಖ ಮಂತ್ರಗಳಲ್ಲಿ ಒಂದಾಗಿದೆ. ಈ ಮಂತ್ರವನ್ನು ಜಪಿಸುವುದರಿಂದ ಒಬ್ಬ ವ್ಯಕ್ತಿಯು ಪಾಪಗಳಿಂದ ಮುಕ್ತನಾಗುತ್ತಾನೆ. ಜೀವನದಲ್ಲಿ ನೋವನ್ನೇ ಅನುಭವಿಸುತ್ತಿದ್ದರೆ ಈ ಮಂತ್ರವನ್ನು ಶುದ್ಧ ಮನಸ್ಸಿನಿಂದ ಪಠಿಸಿ.

ವಿಷ್ಣು ಗಾಯತ್ರಿ ಮಂತ್ರ:

ಓಂ ನಾರಾಯಣಾಯ ವಿದ್ಮಹೇ,

ವಾಸುದೇವಾಯ ಧೀಮಹೀ

ತನ್ನೋ ವಿಷ್ಣು ಪ್ರಚೋದಯಾತ್


ಪ್ರಯೋಜನ:

ವಿಷ್ಣು ಗಾಯತ್ರಿ ಮಂತ್ರವನ್ನು ಪ್ರತಿನಿತ್ಯ ಜಪಿಸುವುದರಿಂದ ಮನಸ್ಸಿನಲ್ಲಿರುವ ಭಯವು ನಾಶವಾಗುತ್ತದೆ. ವಿಷ್ಣು ಗಾಯತ್ರಿ ಮಂತ್ರದಿಂದ ನಾವು ನಮ್ಮ ಬುದ್ಧಿಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು.

ವಿಷ್ಣು ಸಂಕಷ್ಟಹರ ಮಂತ್ರ:

“ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಂ”

ಪ್ರಯೋಜನ:

ವಿಶ್ವಕ್ಕೂ ಒಡೆಯನಾಗಿರುವ ತಂದೆಯೇ ನಾನು ನಿಮಗೆ ವಂದಿಸುವೆ. ವಿಶ್ವದ ಅಸ್ತಿತ್ವ ನೀನೇ ಆಗಿರುವೆ. ನೀವು ಆಗಸದಷ್ಟೇ ವಿಸ್ತರಿಸಿರುವೆ ನಿಮ್ಮ ಬಣ್ಣ ಮೇಘದ್ದಾಗಿದೆ ಮತ್ತು ನಿಮ್ಮ ದೇಹದ ಪ್ರತಿಯೊಂದು ಭಾಗವೂ ಪವಿತ್ರವಾದುದಾಗಿದೆ. ನೀವು ಲಕ್ಷ್ಮೀ ದೇವಿಯ ಪ್ರೀತಿಪಾತ್ರರು, ಸಂಗಾತಿಯಾಗಿರುವಿರಿ. ಕಮಲದಂತಹ ನಯನವನ್ನು ಹೊಂದಿರುವವರೇ, ಯೋಗಿಗಳ ಮನದಲ್ಲಿ ನೆಲೆಸಿರುವ ದೇವರೇ ನಾನು ನಿಮಗೆ ವಂದಿಸುತ್ತೇನೆ. ವಿಶ್ವವನ್ನು ಕಾಪಾಡುವ ರಕ್ಷಕನೇ ನಿನಗಿದೋ ವಂದನೆ.”

ಶ್ರೀ ವಿಷ್ಣು ಸಹಸ್ರ ನಾಮ:

ಯಾರು ವಿಷ್ಣು ಸಹಸ್ರ ನಾಮವನ್ನು ನಿತ್ಯವೂ ಕೇಳುತಾರೊ ಮತ್ತು ಯಾರು ಇದನ್ನು ಪಠಣ ಮಾಡುತ್ತಾರೊ, ಆ ವಾಸುದೇವನ ಭಕ್ತರಿಗೆ ಎಲ್ಲಿಂದಲೂ ಅಶುಭವಿಲ್ಲ. ಮೃತ್ಯು,ವ್ಯಾದಿ,ಭಯ ಹುಟ್ಟುವುದಿಲ್ಲ. ಯಾವ ಮನುಷ್ಯನು ಶ್ರೇಯಸ್ಸನ್ನೂ ಸುಖಗಳನ್ನೂ ಹೊಂದಲು ಇಚ್ಚಿಸುತ್ತಾನೋ ಅವನು ಶ್ರೀ ವ್ಯಾಸರಿಂದ ಹೇಳಲ್ಪಟ್ಟ ಭಗವಾನ್ ಶ್ರೀ ವಿಷ್ಣುವಿನ ಸಹಸ್ರ ನಾಮವನ್ನು ಪಠಣ ಮಾಡಬೇಕು. ಪಠಣ ಮಾಡಲು ಸಾಧ್ಯವಾಗದೆ ಇದ್ದರೆ ದಿನದಲ್ಲಿ ಒಂದು ಬಾರಿಯಾದರು ಕೇಳಬಹುದು.

"ಸರ್ವೇ ಜನಾಃ ಸುಖಿನೋ ಭವಂತು

ಸರ್ವೇ ಸಂತು ನಿರಾಮಯಾಃ

ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿದ್ದುಃಖ ಭಾಗ್ ಭವೇತ್"

ಅರ್ಥ:

ಎಲ್ಲ ಜೀವಿಗಳು ಸುಖವಾಗಿರಲಿ, ಎಲ್ಲರೂ ಮಂಗಳವನ್ನು ನೋಡುವಂತಾಗಲಿ,ಪ್ರತಿಯೊಬ್ಬರೂ ದುಃಖ ರಹಿತವಾಗಿರಲಿ.