ನಮ್ಮಾಳ್ವಾರ್ ವೈಭವಂ - ಭಾಗ ೩ | Nammalvar
ನಮ್ಮಾಳ್ವಾರ್ ಅವರು ರಚಿಸಿದ ನಾಲ್ಕು ಪ್ರಬಂಧಗಳು ನಾಲ್ಕು ವೇದಗಳಿಗೆ ಸಮಾನ, ಅವುಗಳನ್ನು ಸಾಮಾನ್ಯರಿಗೂ ಅರ್ಥವಾಗುವಂತೆ ಸರಳ ತಮಿಳು ಭಾಷೆಯ ಮೂಲಕ ನಮ್ಮೆಲ್ಲರಿಗೂ ವೇದದ ಸಾರವನ್ನೊದಗಿಸಿದ ಮಹಾನ್ ಆಳ್ವಾರ್ ಇವರೆಂದೂ ಕಳೆದ ಸಂಚಿಕೆಗಳ ಮೂಲಕ ನಾವು ಅರಿತೆವಲ್ಲವೇ?

ಈಗ ಮುಂದೆ ನೋಡೋಣ…

ಇವರು ಮೊದಲು ರಚಿಸಿದ ತಿರುವಿರುತ್ತಂ ಭಗವಂತ ಮತ್ತು ಜೀವಾತ್ಮ ನಡುವಿನ ಪ್ರೇಮ, ಇವರಿಬ್ಬರ ಅಗಲುವಿಕೆಯ ಪರಿಣಾಮ, ಮತ್ತೆ ಇಬ್ಬರೂ ಒಂದಾಗುವ ಉಪಾಯವಾಗಿ ಪ್ರಕೃತಿಯ ಹಲವಾರು ಚರಾಚರ ವಸ್ತುಗಳಲ್ಲಿ ಜೀವಾತ್ಮ ಮೊರೆಯಿಡುವುದು, ತನ್ನ ಪ್ರೇಮದ ಕೇಂದ್ರಬಿಂದುವಾದ ಪರಮಾತ್ಮನ ಸ್ವರೂಪ, ಸೌಂದರ್ಯ, ಗುಣವಿಶೇಷಗಳಿಗೆ ತಾನು ಮಾರುಹೋದ ಬಗೆ ಇತ್ಯಾದಿಗಳನ್ನು ಬಹುಸುಂದರವಾಗಿ ನಾಯಕ- ನಾಯಿಕಾಭಾವದ ೧೦೦ ಪಾಶುರಗಳ ಮೂಲಕ ಹೆಣೆದ ಒಂದು ಅದ್ಭುತ ದೈವಿಕ , ವಿರಹ ಪ್ರೇಮಗೀತೆ.

ಇದರ ಮುಂದುವರೆದ ಭಾಗವೆನ್ನಬಹುದಾದ ತಿರುವಾಶಿರಿಯಂ ಬರೀ ೭ ಪಾಶುರಗಳಿರುವ ಪ್ರಬಂಧವಾದರೂ ಇದು ಭಗವಂತನ ದಿವ್ಯಮಂಗಳ ರೂಪವನ್ನು ವರ್ಣಿಸುವ ಪ್ರಬಂಧ… ಆದರೆ ಭಗವಂತ ಸಾಮಾನ್ಯ ಮಾತು, ಪದಗಳ ಹಿಡಿತಕ್ಕೆ ಸಿಗುವ ಸ್ವರೂಪ- ರೂಪ - ಗುಣ ಇತ್ಯಾದಿಗಳನ್ನು ಹೊಂದಿದವನೇ? ಈ ಪ್ರಬಂಧದ ಸೌಂದರ್ಯವನ್ನು ಅದರ ಒಳಹೊಕ್ಕೇ ಅನುಭವಿಸಬೇಕು.

ಇವರ ಮೂರನೆಯ ಪ್ರಬಂಧವಾದ ಪೆರಿಯ ತಿರುವಂದಾದಿ ಮೊದಲೆರಡು ಪ್ರಬಂಧಗಳ ಮುಂದುವರಿದ ಭಾಗ…
ತಿರುವಾಶಿರಿಯಂ ನಲ್ಲಿ ಭಗವಂತನ ಅತಿಶಯ ಸ್ವರೂಪ, ರೂಪ, ಗುಣಾತಿಶಯಗಳನ್ನೆಲ್ಲ ವರ್ಣಿಸಿದ ಮೇಲೆ ಅವನನ್ನು ಸೇರಲೇಬೇಕೆಂಬ ಆಸೆ, ವಿರಹ ಇನ್ನೂ ಉತ್ಕಟವಾದಾಗ, ಆತನಲ್ಲಿ ಆರ್ತರೂಪದ ಪ್ರಾರ್ಥನೆಯೇ ೮೭ ಪಾಶುರಗಳ ಮುಖೇನ ಹೊರಹೊಮ್ಮಿದ ಅದ್ಭುತ ಪ್ರಬಂಧ.

ಇನ್ನು ಕೊನೆಯ ತಿರುವಾಯ್ಮೊಳಿ…ಇದು ಸಾಮವೇದದ ಸ್ವರೂಪ…
“ ವೇದಾನಾಂ ಸಾಮವೇದೋಸ್ಮಿ…” ಎಂದು ಕೃಷ್ಣನೇ ಶ್ರೀಮದ್ಭಗವದ್ಗೀತೆಯಲ್ಲಿ ಹೇಳಿದ ಮೇಲೆ ಈ ಪ್ರಬಂಧದ ಬಗ್ಗೆ ಹೇಳಲು ಏನು ಉಳಿದಿದೆ?
“ತಿರುವಾಯ್ಮೊಳಿ “ ಎನ್ನುವ ತಮಿಳು ಪದಕ್ಕೆ “ ಪವಿತ್ರ ವದನದಿಂದ ಹೊರಹೊಮ್ಮಿದ ಮಾತು/ ವಾಚಕ/ ಭಾಷೆ ಎಂದು ಸರಳ ಕನ್ನಡದಲ್ಲಿ ಅರ್ಥ… ಆದರೆ, ಈ ಪ್ರಬಂಧದಲ್ಲಿ ಅಡಗಿರುವ ಮುಖ್ಯವಾದ ೫ ಸಂದೇಶಗಳನ್ನು ನಾವು ಅರಿತಾಗ ಇದು ಒಂದು ಬರೀ ಸರಳಾರ್ಥದ ಮಾತೋ, ವಾಚಕವೋ, ಭಾಷೆಯಷ್ಟೇ ಅಲ್ಲ ಎಂದು ಅರಿವಾಗುತ್ತದೆ.

ತಿರುವಾಯ್ಮೊಳಿ ನೀಡುವ ಸಂದೇಶಗಳನ್ನು ನಮ್ಮ ಪೂರ್ವಾಚಾರ್ಯರು ಸ್ಥೂಲವಾಗಿ ೫ ವರ್ಗಗಳಲ್ಲಿ ವಿಂಗಡಿಸಿದ್ದಾರೆ…
೧. ಜೀವಾತ್ಮನ ಸ್ವರೂಪ
೨. ಪರಮಾತ್ಮನ ಕಲ್ಯಾಣಗುಣಗಳ ವರ್ಣನೆ
೩. ಜೀವಾತ್ಮನಿಗೂ ಪರಮಾತ್ಮನಿಗೂ ಇರುವ ಸಂಬಂಧ
೪. ಪರಮಾತ್ಮನನ್ನು ಜೀವಾತ್ಮ ಸೇರಲು ಇರುವ ತಡೆ, ವಿಘ್ನ
೫. ಪರಮಾತ್ಮನನ್ನು ಸೇರಲು ಇರುವ ದಾರಿ( ಮೋಕ್ಷಾನಂತರದ ಫಲವೇನು? - ಅವನ ನಿರಂತರ ಕೈಂಕರ್ಯ, ಜನ್ಮಾಂತರಗಳಿಂದ ಬಿಡುಗಡೆ)
ಇವನ್ನೇ ತಿರುವಾಯ್ಮೊಳಿಯ ಆರಂಭಿಕ ತನಿಯನ್ ಗಳಲ್ಲಿ ಒಂದಾದ ಪರಾಶರಭಟ್ಟರ್ ವಿರಚಿತ ಈ ಪಾಶುರದಲ್ಲಿ ಹೀಗೆಂದಿದ್ದಾರೆ…

“ ಮಿಕ್ಕ ವಿಱೈ ನಿಲೈಯುಂ ಮೆಯ್ಯಾಮುಯಿರ್ ನಿಲೈಯುಮ್,
ತಕ್ಕ ನೆಱಿಯುಮ್ ತಡೈಯಾಹಿ ತ್ತೊಕ್ಕಿಯಲುಮ್,
ಊழ் ವಿನೈಯುಮ್ ವಾழ்ವಿನೈಯುಮ್ ಓದುಮ್ ಕುರುಹೈಯರ್ ಕೋನ್
ಯಾழிನಿಶೈ ವೇದತ್ತಿಲ್”

ಮಿಕ್ಕ ಯಾವುದೇ ಪ್ರಬಂಧಗಳಿಗಿಲ್ಲದ ಹಿರಿಮೆ ಈ ತಿರುವಾಯ್ಮೊಳಿಗಿದೆ. ಈ ಪ್ರಬಂಧಕ್ಕೆ ಮುಖ್ಯವಾಗಿ ೫ ಪೂರ್ವಾಚಾರ್ಯರ ವ್ಯಾಖ್ಯಾನಗಳಿವೆ… ಈ ವ್ಯಾಖ್ಯಾನಗಳು ನಮಗೆ ಏಕೆ ಮುಖ್ಯವೆಂದರೆ, ಇವುಗಳ ವಿನಹ ನಮ್ಮಂಥ ಸಾಮಾನ್ಯರಿಗೆ ತಿರುವಾಯ್ಮೊಳಿಯಂಥ ಮಹಾನ್ ಪ್ರಬಂಧದ ಒಳಅರ್ಥ ತಿಳಿಯುವುದು ಅಸಾಧ್ಯವೇ ಸರಿ.

ಈ ವ್ಯಾಖ್ಯಾನಗಳ ಒಂದು ಮಾದರಿಯನ್ನು ನಾವೀಗ ನೋಡೋಣ…

ವಾದಿಕೇಸರಿ ಅಳಗಿಯ ಮಣವಾಳಜೀಯರ್ ಅವರು ರಚಿಸಿದ ವ್ಯಾಖ್ಯಾನ ( ೧೨೦೦೦ ಪಡಿ)ತಿರುವಾಯ್ಮೊಳಿಯ ೧೦ ದಶಕಗಳನ್ನು ಹೀಗೆ ವರ್ಗೀಕರಿಸುತ್ತದೆ….

೧. ತಿರುವಾಯ್ಮೊಳಿಯ ಮೊದಲ ಎರಡು ದಶಕಗಳು ಜೀವಾತ್ಮನ ಸ್ವರೂಪವನ್ನು ವಿವರಿಸುತ್ತವೆ.
೨. ಮೂರು ಮತ್ತು ನಾಲ್ಕನೆಯ ದಶಕಗಳು ಪರಮಾತ್ಮನನ್ನು ಹೊಂದುವ ದಾರಿಗಳ ಬಗ್ಗೆ ವಿವರಿಸುತ್ತವೆ.
೩. ಐದು, ಆರನೆಯ ದಶಕಗಳು ನಮ್ಮ ಗುರಿಸಾಧನೆಗೆ ಇರುವ ಅಡ್ಡಿ ಆತಂಕಗಳ ಬಗ್ಗೆ ವಿವರಿಸುತ್ತವೆ.
೪. ಏಳು ಎಂಟನೆಯ ದಶಕಗಳು ಜೀವಾತ್ಮನ ಅಂತಿಮ ಗುರಿಯ ವರ್ಣನೆ ಮಾಡುತ್ತವೆ.
೫. ಕೊನೆಯದಾಗಿ ಒಂಬತ್ತು ಮತ್ತು ಹತ್ತನೆಯ ದಶಕಗಳು ಪರಮಾತ್ಮನ ವಾಸಸ್ಥಳದ ವರ್ಣನೆ, ಜೀವಾತ್ಮ ತನ್ನ ಅಂತಿಮ ಗುರಿ ಸೇರಿದ ನಂತರ ಆತನಿಗೆ ಸಿಗುವ ಸ್ವಾಗತ ಇತ್ಯಾದಿಗಳ ಬಗ್ಗೆ ವರ್ಣಿಸುತ್ತವೆ.

ಈ ಎಲ್ಲ ಸಂದೇಶಗಳ ಕೇಂದ್ರಬಿಂದು ಭಗವಂತನೇ ಆಗಿರುವುದರಿಂದ ಈ ಸಂದೇಶಗಳನ್ನು ಒಳಗೊಂಡ ತಿರುವಾಯ್ಮೊಳಿಗೆ “ ಭಗವದ್ವಿಷಯಂ” ಎಂದು ಇನ್ನೊಂದು ಹೆಸರೂ ಇದೆ.

ಇನ್ನು ತಿರುವಾಯ್ಮೊಳಿಯ ಕಾವ್ಯರಚನೆಯ ಸೊಬಗನ್ನು ಮಾತ್ರವೇ ನೋಡುವುದಾದರೂ ಇದು ಒಂದು ಸುಂದರ ಅಂದಾದಿಯ ರೂಪದಲ್ಲಿ ( ಅಂತ್ಯದಿಂದಲೇ ತೊಡಗುವ ಆದಿ) ರಚಿಸಲ್ಪಟ್ಟ ಪ್ರಬಂಧ.

ಈ ಅಂದಾದಿಯನ್ನು ಮೂರು ರೀತಿಯಲ್ಲಿ ರಚಿಸಬಹುದು ಎನ್ನುತ್ತಾರೆ ಕಾವ್ಯ ವಿಶೇಷಜ್ಞರು.

ಮೊದಲನೆಯದು ….ಪದಗಳಿಗೆ ಸಂಬಂಧಿಸಿದ ಅಂದಾದಿ ( ಅಂದರೆ ಒಂದು ಪಾಶುರದ ಕೊನೆಯಲ್ಲಿ ಬರುವ ಪದದಿಂದಲೇ ಮುಂದಿನ ಪಾಶುರದ ಮೊದಲ ಪದ ಆರಂಭವಾಗುವುದು.)
ಎರಡನೆಯದು…. ಅರ್ಥಕ್ಕೆ ಸಂಬಂಧಿಸಿದ ಅಂದಾದಿ ( ಇದೂ ಕೂಡ ಹಿಂದಿನ ಪಾಶುರದ ಕೊನೆಯಲ್ಲಿ ಬರುವ ಅರ್ಥವನ್ನು ಮುಂದಿನ ಪಾಶುರದ ಆರಂಭದಿಂದ ಮುಂದುವರಿಸುವ ಬಗೆ)
ಮೂರನೆಯದು…. ಮಂಡಲ ಅಂದಾದಿ ( ಅಂದರೆ, ಪ್ರಬಂಧದ ಕಟ್ಟಕಡೆಯ ಪಾಶುರದ ಕೊನೆಯ ಪದ ಮತ್ತು ಪ್ರಬಂಧದ ಮೊತ್ತಮೊದಲ ಪಾಶುರದ ಮೊದಲ ಪದ ಎರಡೂ ಒಂದೇ ಇರುವ ರೀತಿಯ ರಚನೆ… ಇದು ಒಂದು ಮಂಡಲ ಪೂರ್ತಿಯಾದಂತೆ ಎಂದು ಸೂಚಿಸುತ್ತದೆ.)
ಈ ಮೂರೂ ರೀತಿಯ ಅಂದಾದಿಗಳ ರೀತಿಯಲ್ಲಿ ರಚಿಸಿರುವ ಸುಂದರ ಪ್ರಬಂಧವೇ ತಿರುವಾಯ್ಮೊಳಿ.

ನಮ್ಮಾಳ್ವಾರ್ ಅವರ ಪ್ರಬಂಧಗಳು ವಾಲ್ಮೀಕಿ ವಿರಚಿತ ರಾಮಾಯಣಕ್ಕಿಂತಲೂ ಮಿಗಿಲಾದದ್ದು ಎಂದು ಕೆಲವು ವ್ಯಾಖ್ಯಾನಕಾರರು ವರ್ಣಿಸುತ್ತಾರೆ… ಹೇಗೆ?

ಶೋಕರೂಪದ ಶಾಪ ಶ್ಲೋಕದ ಮುಖೇನ ವಾಲ್ಮೀಕಿಯಿಂದ ಹೊರಹೊಮ್ಮಿದರೂ ಖೇದಕ್ಕೊಳಗಾದ ಅವರನ್ನು ಸಾಂತ್ವಯಿಸಿ, ರಾಮಾಯಣ ರಚನೆಗೆ ಪ್ರೋತ್ಸಾಹಿಸುವ ಸಲುವಾಗಿ ಭಗವಂತನ ಸಂಕಲ್ಪದಂತೆ , ಬ್ರಹ್ಮನಿಂದ ಕಳಿಸಲ್ಪಟ್ಟ ನಾರದರು, ಅವರ ಸಾಂತ್ವನದ ಪರಿಣಾಮವಾಗಿ ಸರಸ್ವತಿ ವಾಲ್ಮೀಕಿಯ ನಾಲಿಗೆಯಲ್ಲಿ ಪ್ರತ್ಯಕ್ಷಳಾಗಿ, ನಲಿದ ಪರಿಣಾಮವಾಗಿ ರಚನೆಯಾದ ಮಹಾಕಾವ್ಯ ಶ್ರೀಮದ್ ರಾಮಾಯಣ.

ಆದರೆ ಇಲ್ಲೋ? ಭಗವಂತ ನೇರವಾಗಿ ನಮ್ಮಾಳ್ವಾರ್ ಅವರ ನಾಲಿಗೆಯಲ್ಲೇ ಕುಳಿತು ಅವರಿಂದ ತನ್ನ ಬಗೆಗಿನ ಸ್ತುತಿಯ ಸೇವೆಯನ್ನು ಪಡೆದುಕೊಂಡ.

ನಮ್ಮಾಳ್ವಾರ್ ಅವರಿಂದ ಬಹುವಾಗಿ ಸ್ತುತಿಸಲ್ಪಟ್ಟ ಕೃಷ್ಣನಂತೆಯೇ ತಿರುವಾಯ್ಮೊಳಿ ಪ್ರಬಂಧಕ್ಕೂ ಇಬ್ಬರು ತಾಯಂದಿರು!

ನೈಸರ್ಗಿಕ ( ಹೆತ್ತ) ತಾಯಿ ನಮ್ಮಾಳ್ವಾರ್ ಅವರಾದರೂ ಇದನ್ನು ಸಾಕಿದ, ಬೆಳೆಸಿದ ತಾಯಿ ಭಗವದ್ರಾಮಾನುಜರಂತೆ.
ಹೀಗೆಂದು ತಿರುವಾಯ್ಮೊಳಿಯ ಪ್ರಾರಂಭಿಕ ತನಿಯನ್ ನಲ್ಲಿ ಪರಾಶರಭಟ್ಟರು ವರ್ಣಿಸುತ್ತಾರೆ…

“ ವಾನ್ ತಿಗழுಮ್ ಶೋಲೈ ಮದಿಳರಂಗರ್ ವಣ್ ಪುಹழ் ಮೇಲ್
ಆನ್ ಱ ತಮಿழ் ಮಱೈ ಹಳಾಯಿರಮುಮ್ ಈನ್ರ ಮುದಲ್ ತಾಯ್ ಶಡಗೋಪನ್ ಮೊಯ್ಬಾಲ್ ವಳರ್ತ ಇದತ್ತಾಯ್ ಇರಾಮಾನುಜನ್.”

ಶ್ರೀರಾಮಾನುಜರ ಶ್ರೀಭಾಷ್ಯ ಗ್ರಂಥಕ್ಕೆ ತಿರುವಾಯ್ಮೊಳಿಯೇ ಆಧಾರ. ಅಂತೆಯೇ ತಿರುವಾಯ್ಮೊಳಿ ಪಾರಾಯಣವಾಗುವ ಕಡೆಯಲ್ಲೆಲ್ಲ ಶ್ರೀರಾಮಾನುಜರ ಸಾಂನ್ನಿಧ್ಯವಿದೆಯೆಂದು ಪ್ರತೀತಿ.

ತಿರುಮಂಗೈ ಆಳ್ವಾರ್ ಅವರ ತಿರುನಕ್ಷತ್ರದ ನಂತರ ತೊಡಗುವ ಅಧ್ಯಯನೋತ್ಸವದ ಅಂಗವಾಗಿ ಪಠಿಸಲ್ಪಡುವ ತಿರುವಾಯ್ಮೊಳಿಯನ್ನು ಪಠಿಸುವಾಗ ಇಂದಿಗೂ ಶ್ರೀರಂಗಂನಲ್ಲಿ ಗೌಪ್ಯವಾಗಿ ( ಅಂದರೆ ಅದರ ಪಾವಿತ್ರ್ಯತೆಯನ್ನು ಕಾಪಾಡಲು,ತೆರೆಯ ಮರೆಯಲ್ಲಿ) ಪಠಿಸುವ ಕ್ರಮವಿದೆಯಂತೆ…

ತಮಿಳಿನ ಪ್ರಸಿದ್ಧ ಕವಿ ಕಂಬನ್ ಅವರು ರಚಿಸಿದ “ ಶಠಗೋಪರಂದಾದಿ” ಎನ್ನುವ ಸ್ತೋತ್ರದಲ್ಲಿ ತಿರುವಾಯ್ಮೊಳಿಯನ್ನು “ ಆರಾ ಅಮುದ ಕವಿ ಆಯಿರಂ”( ಬತ್ತದ ಅಮೃತದ ರುಚಿಯ ೧೦೦೦ ಪದ್ಯಗಳು)ಎಂದು ಬಣ್ಣಿಸುತ್ತಾರೆ.

ಇನ್ನು ಅಳಗಿಯ ಮಣವಾಳ ಜೀಯರ್ ಅವರು “ ತಿರುವಾಯ್ಮೊಳಿ ನೂತ್ತಂದಾದಿ” ಎನ್ನುವ ಪ್ರಬಂಧವನ್ನು ರಚಿಸಿದ್ದಾರೆ.
ಇದರ ವೈಶಿಷ್ಟ್ಯತೆ ಏನೆಂದರೆ,
ಇದೂ ಕೂಡ ಅಂದಾದಿ ಶೈಲಿಯಲ್ಲಿದೆ. ಪ್ರತಿಯೊಂದು ಪಾಶುರದಲ್ಲೂ ಆಯಾ ದಶಕದ ಅರ್ಥ ಅಡಗಿದೆ.
ಪ್ರತೀ ಪಾಶುರದಲ್ಲೂ ನಮ್ಮಾಳ್ವಾರ್ ಅವರ ತಿರುನಾಮವೂ ಮತ್ತು ಅವರ ವೈಭವವೂ ಅಡಗಿದೆ.

ಹೀಗೆ ಇನ್ನೂ ಕೆಲವು ತಮಿಳಿನ ಸಾಂಪ್ರದಾಯಿಕ ಕವಿಗಳು ತಿರುವಾಯ್ಮೊಳಿಯ ಸೊಬಗು, ಮಹತ್ವವನ್ನು ಹೇಗೆ ವರ್ಣಿಸಿದ್ದಾರೆ?

ಮತ್ತು ತಿರುವಾಯ್ಮೊಳಿಯ ಒಂದು ಬಹಳ ಮಹತ್ವವಿರುವ ಪದಿಗಂ , ಪಾಶುರದ ಬಗ್ಗೆ ಪ್ರಚಲಿತವಿರುವ ಕತೆಯ ಮುಖೇನ ನಮ್ಮಾಳ್ವಾರ್ ಅವರು ಶ್ರೀಮನ್ನಾರಾಯಣನ ಪರತ್ವವನ್ನು ನಮಗೆ ಹೇಗೆ ಸಾರುತ್ತಾರೆ?… ಇತ್ಯಾದಿಗಳ ಬಗ್ಗೆ ಮುಂದಿನ ಸಂಚಿಕೆಯಲ್ಲಿ ಅರಿಯೋಣ…

ನಮ್ಮಾಳ್ವಾರ್ ತಿರುವಡಿಗಳೇ ಶರಣಂ…